ಸೋಮವಾರ, ಫೆಬ್ರವರಿ 28, 2011

2011-2012ರ ಕೇಂದ್ರ ರೈಲ್ವೆ ಬಜೆಟ್: ಒಂದು ವಿಶ್ಲೇಷಣೆ


25ನೇ ತಾರೀಖಿನಂದು 2011-2012ರ ಕೇಂದ್ರ ಸರ್ಕಾರದ ರೈಲ್ವೇ ಬಜೆಟ್ ಮಂಡಿಸಲಾಗಿದೆ. ನಮ್ಮ ರಾಜ್ಯಕ್ಕೆ ಬಹಳಷ್ಟು ಒಳ್ಳೆಯ ಯೋಜನೆಗಳನ್ನು ಈ ಬಾರಿ ಬಜೆಟ್ಟಿನಲ್ಲಿ ಘೋಷಿಸಲಾಗಿದೆ ಎಂದು ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷ ತನ್ನ ಬೆನ್ನು ತಟ್ಟಿಕೊಂಡಿದೆ. ಈ ಬಾರಿಯ ರೈಲ್ವೇ ಬಜೆಟ್ ನಮ್ಮ ರಾಜ್ಯಕ್ಕೆ ಐತಿಹಾಸಿಕ ಎಂದು ಹೇಳಿಕೆ ನೀಡಿದ್ದ ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ರಾತ್ರೋರಾತಿ ಜ್ಞಾನೋದಯವಾಗಿ ಮರುದಿನವೇ ರಾಜ್ಯಕ್ಕೆ ರೈಲ್ವೇ ಬಜೆಟ್ಟಿನಲ್ಲಿ ಅನ್ಯಾಯವಾಗಿದೆ ಎಂದು ಪತ್ರಿಕೆಗಳಿಗೆ ಹೇಳಿಕೆ ನೀಡಿದರು.

ಈ ಬಜೆಟ್ಟಿನಲ್ಲಿ ನಮ್ಮ ರಾಜ್ಯಕ್ಕೆ ಏನೇನು ಸಿಕ್ಕಿದೆ ಅನ್ನೋದನ್ನ ನೋಡುವುದಕ್ಕಿಂತಲೂ, ನಿಜಕ್ಕೂ ನಮ್ಮ ನಾಡಿಗೆ ಎಂಥ ರೈಲ್ವೇ ವ್ಯವಸ್ಥೆ ಬೇಕು ಎನ್ನೋದನ್ನ ನೋಡೋಣ. ಇದರ ಜೊತೆಜೊತೆಗೆ ನಮ್ಮ ಈ ಸರ್ತಿಯ ಬಜೆಟ್ಟಿನಲ್ಲಿ ಏನು ಸಿಕ್ಕಿದೆ ಅನ್ನೋದನ್ನ ಸಹ ನೋಡೋಣ.

ನಾಡಿನ ಪ್ರಮುಖ ನಗರಗಳ ನಡುವೆ ಸಂಪರ್ಕ ಜಾಲ:
ಕರ್ನಾಟಕ ರಾಜ್ಯದ ಎಲ್ಲಾ ಪ್ರಮುಖ ಕೈಗಾರಿಕಾ ನಗರಗಳನ್ನು, ಬಂದರುಗಳನ್ನು, ಪ್ರವಾಸಿ ತಾಣಗಳನ್ನು, ಎಲ್ಲಾ ಜಿಲ್ಲಾಕೇಂದ್ರಗಳನ್ನು ಜೋಡಿಸುವಂತಹ ಯೋಜನೆಗಳು ನಮ್ಮ ನಾಡಿಗೆ ಬೇಕಾಗಿವೆ. ಮಂಗಳೂರು, ಪಡುಬಿದ್ರಿ, ಮಲ್ಪೆ, ಭಟ್ಕಳ, ಹೊನ್ನಾವರ ಮೊದಲಾದ ಬಂದರುಗಳಿಗೆ ರೈಲು ಸಂಚಾರ ಕಲ್ಪಿಸಬೇಕಾಗಿತ್ತು, ಆದರೆ ಈ ಯೋಜನೆಗಳಿಗೆ ಕೇಂದ್ರ ಸರ್ಕಾರ ಯಾವುದೇ ಗಮನ ಹರಿಸಿಲ್ಲ. ಹಾಗೆಯೇ ರಾಜ್ಯದ ಯಾವುದೇ ಪ್ರವಾಸಿ ತಾಣಗಳಿಗೆ ಈ ಬಜೆಟ್ಟಿನಲ್ಲಿ ರೈಲು ಸಂಪರ್ಕ ಕಲ್ಪಿಸಲಾಗಿಲ್ಲ. ಈ ಬಜೆಟ್ಟಿನಲ್ಲಿ ಕೆಲವು ರೈಲ್ವೆ ಯೋಜನೆಗಳು ಮಂಜೂರಾಗಿದ್ದರು ಸಹ, ಕೆಲವು ರೈಲುಗಳ ಓಡಾಡುವ ದಾರಿ ತುಂಬಾ ಚಿಕ್ಕದು ಅಥವಾ ಈ ಮುಂಚೆಯೇ ಆ ನಗರಗಳಿಗೆ ಹಲವಾರು ರೈಲುಗಳು ಓಡಾಡುತ್ತಿವೆ. ಆದರೆ ಪ್ರಮುಖವಾಗಿ ಒಳನಾಡನ್ನು ಸಂಪರ್ಕಿಸಬೇಕಾಗಿದ್ದ ಹಲವು ಯೋಜನೆಗಳನ್ನು ಈ ಬಜೆಟ್ಟಿನಲ್ಲಿ ಪರಿಗಣಿಸಲಾಗಿಲ್ಲ. ಅಂತರ ರಾಜ್ಯ ರೈಲುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ, ಇದರಿಂದ ವಲಸೆಗೆ ಉತ್ತೇಜನ ನೀಡಿದಂತಾಗಬಹುದು. ಹೊಸ ಮಾರ್ಗ, ಗೇಜ್ ಪರಿವರ್ತನೆ ಸೇರಿದಂತೆ ಮತ್ತಿತರ ಪ್ರಗತಿಯಲ್ಲಿರುವ ಯೋಜನೆಗಳಿಗೆ ಅನುದಾನ ಸಿಕ್ಕಿಲ್ಲ.

ಉದಾ: ಬೆಂಗಳೂರು - ಬೆಳಗಾವಿ, ಬೀದರ್ - ಬೆಂಗಳೂರು, ಮೈಸೂರು - ಬಿಜಾಪುರ, ಹೊಸಪೇಟೆ - ಬೆಂಗಳೂರು, ಹುಬ್ಬಳ್ಳಿ - ಗುಲ್ಬರ್ಗ, ಬೆಂಗಳೂರು - ಚಾಮರಾಜನಗರ, ಅರಸೀಕೆರೆ - ಬೆಂಗಳೂರು, ಬಂಗಾರಪೇಟೆ - ರಾಮನಗರ, ತುಮಕೂರು - ಚನ್ನಪಟ್ಟಣ, ಬೆಂಗಳೂರು - ದಾವಣಗೆರೆ - ಹುಬ್ಬಳ್ಳಿ - ಲೋಂಡಾ, ವಾಸ್ಕೋ - ಕಾರವಾರ - ಮಂಗಳೂರು - ಹಾಸನ ಮುಂತಾದ ಒಳನಾಡಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳು ಜಾರಿಯಾಗಿಲ್ಲ.

ಇದರ ಜೊತೆಗೆ ಪ್ರಗತಿಯಲ್ಲಿರುವ ಮುನಿರಾಬಾದ್ - ಮೆಹಬೂಬನಗರ, ಕಡೂರು - ಚಿಕ್ಕಮಗಳೂರು - ಸಕಲೇಶಪುರ, ಬೀದರ್ - ಗುಲ್ಬರ್ಗ , ಚಿಕ್ಕಬಳ್ಳಾಪುರ - ಕೋಲಾರ, ನೆಲಮಂಗಲ - ಶ್ರವಣಬೆಳಗೊಳ, ಶ್ರೀನಿವಾಸಪುರ - ಮದನಪಲ್ಲಿ ಯೋಜನೆಗಳ ಬಗ್ಗೆ ಯಾವುದೇ ಪ್ರಸ್ತಾಪವಾಗಿಲ್ಲ.

ಉತ್ತರ ಕರ್ನಾಟಕ, ಮಲೆನಾಡು, ಕೋಲಾರ ಜಿಲ್ಲೆ ಮತ್ತು ಕೊಂಕಣ ಭಾಗಕ್ಕೆ ಸಂಪರ್ಕ ಕಲ್ಪಿಸುವ 7 ಯೋಜನೆಗಳ ಬಗ್ಗೆ ಈ ಬಜೆಟ್ಟಿನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಈ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ 50 ರಷ್ಟು ಹಣವನ್ನು ನೀಡುವುದಾಗಿ ಹೇಳಿತ್ತು. ಈ 7 ಯೋಜನೆಗಳು ಈ ರೀತಿ ಇವೆ: ಶಿವಮೊಗ್ಗ - ಹರಿಹರ, ವೈಟ್ ಫೀಲ್ಡ್ - ಕೋಲಾರ, ತುಮಕೂರು - ದಾವಣಗೆರೆ, ಗದಗ - ಹಾವೇರಿ, ಬಿಜಾಪುರ - ಶಹಾಬಾದ್, ಧಾರವಾಡ - ಬೆಳಗಾವಿ ಹಾಗೂ ತಾಳಗುಪ್ಪ - ಹೊನ್ನಾವರ.

ರೈಲುಮಾರ್ಗಗಳ ವಿದ್ಯುದೀಕರಣ:
ಇಡೀ ಕರ್ನಾಟಕದ ಶೇಕಡಾ 5%ಕ್ಕಿಂತ ಕಡಿಮೆ ರೈಲುಮಾರ್ಗ ವಿದ್ಯುದೀಕರಣವಾಗಿದ್ದು ಅದೂ ಕೂಡಾ ಅಂತರರಾಜ್ಯ ರೈಲುಮಾರ್ಗಗಳು ಮಾತ್ರವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ವಿದ್ಯುತ್ ಮಾರ್ಗಗಳು ಭಾಗಷಃ ಇಲ್ಲವೆಂದೇ ಹೇಳಬೇಕಾಗಿದೆ. ಈ ಬಜೆಟ್ಟಿನಲ್ಲಿ ರೈಲು ವಿದ್ಯುದೀಕರಣಕ್ಕೆ ಒತ್ತು ನೀಡಲಾಗಿಲ್ಲ.

ಪೂರಕ ಉದ್ದಿಮೆಗಳು:
ಈ ಸರತಿಯ ಬಜೆಟ್ಟಿನಲ್ಲಿ ರಾಜ್ಯಕ್ಕೆ ಹೆಚ್ಚು ಉಪಯೋಗವಾಗುವಂತಹ ಅಥವಾ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವಂತಹ ಪೂರಕ ಯೋಜನೆಗಳನು ಜಾರಿ ಮಾಡಲಾಗಿಲ್ಲ. ವಿವಿಧೋದ್ದೇಶ ತರಬೇತಿ ಕೇಂದ್ರ ಧಾರವಾಡದಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ, ಹುಬ್ಬಳ್ಳಿ-ಧಾರವಾಡದಲ್ಲಿ ಪಾಲಿಟೆಕ್ನಿಕ್ ಶುರು ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ರೈಲ್ವೆ ಕೋಚ್ ಕಾರ್ಖಾನೆ, ರೈಲುಗಳಲ್ಲಿ ಮಾರಲಾಗುವ ಊಟ, ನೀರು ಮೊದಲಾದ ಪ್ಯಾಕೆಜಿಂಗ್ ಕಾರ್ಖಾನೆಗಳನ್ನು ಕರ್ನಾಟಕಕ್ಕೇ ನೀಡಲಾಗಿಲ್ಲ. ಕೇವಲ ಹುಬ್ಬಳ್ಳಿ, ಚಿಂತಾಮಣಿ, ಶಿಡ್ಲಘಟ್ಟ ಮತ್ತು ಶ್ರೀನಿವಾಸಪುರಗಳ ರೈಲ್ವೆ ನಿಲ್ದಾಣಗಳನ್ನು ಆದರ್ಶ ನಿಲ್ದಾಣಗಳನ್ನಾಗಿ ಮಾಡುವುದಾಗಿ ಘೋಷಿಸಲಾಗಿದೆ, ಆದರೆ ನಮ್ಮ ರಾಜ್ಯದ ಅನೇಕ ಜಿಲ್ಲಾ ಕೇಂದ್ರಗಳ ರೈಲ್ವೆ ನಿಲ್ದಾಣಗಳೇ ಮೂಕಭೂತ ಸೌಕರ್ಯದಿಂದ ವಂಚಿತವಾಗಿವೆ, ಇಂತಹ ನಿಲ್ದಾನಗಳತ್ತ ಗಮನ ಹರಿಸಲಾಗಿಲ್ಲ.

ಪ್ರತ್ಯೇಕ ವಿಭಾಗಗಳಿಗೆ ಬೇಡಿಕೆ:
ಕಳೆದ ಎರೆಡು ದಶಕಗಳಿಂದ ಗುಲ್ಬರ್ಗಾ ಮತ್ತು ಮಂಗಳೂರು ವಿಭಾಗಗಳ ವಿಚಾರ ನೆನೆಗುದಿಗೆ ಬಿದ್ದಿದೆ. ಈ ವಿಭಾಗಗಳಾದರೆ ಪ್ರಸ್ತಾವಿತ ಯೋಜನೆಗಳ ನಿರ್ವಹಣೆ, ರೈಲ್ವೆ ಸೇವೆಗಳ ಉಸ್ತುವಾರಿ ಹಾಗು ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದರಿಂದ ಕನ್ನಡಿಗರಿಗೆ ಗ್ರಾಹಕ ಸೇವೆಯ ಜೊತೆಗೆ ನಾಡಿನ ಅನೇಕ ಯುವಕರಿಗೆ ಉದ್ಯೋಗಾವಕಾಶ ದೊರಕಿದಂತಾಗುತ್ತದೆ.

ಅರ್ಧದಷ್ಟು ತಾಲೂಕುಗಳಿಗೆ ರೈಲೇ ಇಲ್ಲಾ:
ರಾಜ್ಯದ 176 ತಾಲೂಕುಗಳ ಪೈಕಿ ಅರ್ಧದಷ್ಟು ತಾಲೂಕುಗಳು ಅಂದರೆ 86 ತಾಲೂಕುಗಳಿಗೆ ರೈಲಿನ ಸಂಪರ್ಕವೇ ಇಲ್ಲ. ಜಿಲ್ಲಾ ಕೇಂದ್ರಗಳಾದ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳು ಸಹ ರೈಲಿನ ಸಂಪರ್ಕದಿಂದ ದೂರ ಉಳಿದಿವೆ. ಕೊಡಗು ಜಿಲ್ಲೆಯಲ್ಲಿರುವ ಮೂರು ತಾಲೂಕುಗಳಲ್ಲಿಯೂ ರೈಲು ಇಲ್ಲಾ.

ಬಹುಶಃ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಹಾಗೂ ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡಬೇಕಾದ ಅಗತ್ಯತೆ ಇದೆ. ಜೊತೆಜೊತೆಗೆ ನಮ್ಮ ರಾಜ್ಯ ಸರ್ಕಾರ ಕೂಡ ನಮ್ಮ ನಾಡಿಗೆ ಬೇಕಾಗಿರುವ ಯೋಜನೆಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಕ್ಕೆ ತರಲು ಕೆಲಸ ಮಾಡಬೇಕು ಹಾಗೂ ಕೇಂದ್ರದ ಮೇಲೆ ಒತ್ತಡ ಹೇರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ